Wikipedia

Search results

Friday, August 23, 2013

Israel and Bharatha (India)




-- ಇಸ್ರೇಲ್‌ದೇಶದ ಬಗೆಗೆ ಭಾರತದ ಮಾಧ್ಯಮಗಳಲ್ಲಿ ಇಲ್ಲ ಎನ್ನುವಷ್ಟು ಕಡಿಮೆ ಚರ್ಚೆ ನಡೆದಿದೆ. ಇದಕ್ಕೆ ಕಾರಣವೂ ಗುಟ್ಟೇನಲ್ಲ. ಮುಸ್ಲಿಮರ ’ಭಾವನೆ’ಗಳಿಗೆ ಧಕ್ಕೆಯುಂಟಗುತ್ತದೆ ಎಂದು. ಕೆಮ್ಮಿದರೆ ಸೀನಿದರೆ ಧಕ್ಕೆಗೊಳಪಡುವ ಆ ಭಾವನೆಯ ಹಿಂದಿರುವ ತತ್ತ್ವವಿಷ್ಟೇ: ಅನೇಕ ಶತಮಾನಗಳ ಕಾಲ ಯಾವ ಜನರನ್ನು ನಾವು ಆಳಿದೆವೋ ಅವರ ಸರ್ಕಾರದಡಿಯಲ್ಲಿ ನಾವು ಇದ್ದೇವಲ್ಲಾ; ಈ ಪಾರತಂತ್ರ್ಯಕ್ಕೆ ಯಾವಾಗ ಕೊನೆ? ಎಂದು. ಇದು ಸೊಪ್ಪುಹಾಕಿದಷ್ಟೂ ಹೆಚ್ಚುತ್ತದೆ. ಅದಿರಲಿ, ಮೊದಲು ಇಸ್ರೇಲ್ ಹಾಗೂ ಭಾರತದೇಶಗಳ ನಡುವಣ ಸಾಮ್ಯಗಳನ್ನು ಗಮನಿಸೋಣ.
ಸಾಮ್ಯಗಳು
೧. ಇಸ್ರೇಲ್ ದೇಶವು ಯಹೂದ್ಯಸಂಸ್ಕೃತಿಗಿರುವ ಏಕೈಕ ಆಶ್ರಯಸ್ಥಾನ.
೨. ಯಹೂದ್ಯರು ಮತಾಂತರಕ್ಕೆ ಕೈಹಾಕುವುದಿಲ್ಲ.
೩. ಮಧ್ಯ ಏಶಿಯಾದ ಮತಾಂಧ ರಾಷ್ಟ್ರಗಳ ನಡುವೆ ಇರುವ ಪ್ರಜಾಪ್ರಭುತ್ವವುಳ್ಳ ಏಕೈಕ ರಾಷ್ಟ್ರ.
೪. ಪ್ರತಿ ಚದರ ಕಿಲೋಮೀಟರಿಗೆ ೩೨೪ ಜನರು ವಾಸಿಸುತ್ತಾರೆ.
೫. ಇಸ್ರೇಲಿನ ಜನಸಂಖ್ಯೆಯ ೧೬.೨% ರಷ್ಟು ಅರಬ್ ಮುಸ್ಲಿಮರು.
೬. ಇಸ್ರೇಲಿನ ನಾಶವನ್ನೇ ಗುರಿಯಾಗಿಟ್ಟುಕೊಂಡಿರುವ ಅರಬ್ ರಾಷ್ಟ್ರಗಳು ಅದನ್ನು ಲ್ಲೆಡೆಯಿಂದಲೂ ಸುತ್ತುವರೆದಿವೆ ಹಾಗೂ ನಿರಂತರವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿವೆ.
೭. ಇದುವರೆಗೆ ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳ ನಡುವೆ ೩ ಯುದ್ಧಗಳು ನಡೆದಿವೆ ಹಾಗೂ
ಎಲ್ಲದರಲ್ಲೂ ಇಸ್ರೇಲ್ ಮೇಲುಗೈ ಸಾಧಿಸಿದೆ.
ಅಂತೆಯೇ,
೧. ಭಾರತದೇಶವು ಸನಾತನಧರ್ಮ ಹಾಗೂ ಆ ಸಂಸ್ಕೃತಿಗಳಿಗಿರುವ ಏಕೈಕ ಆಶ್ರಯಸ್ಥಾನ.
೨. ಸನಾತನಧರ್ಮ ಹಾಗೂ ಅದರ ಮತಗಳಾವುವೂ ಮತಾಂತರಕ್ಕೆ ಕೈಹಾಕುವುದಿಲ್ಲ.
೩. ಮತಾಂಧದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಕಮ್ಯುನಿಸ್ಟ್ ರಾಷ್ಟ್ರಗಳಾದ ಚೀನಾ, ನೇಪಾಳ ಹಾಗೂ ಮಿಲಿಟರಿ ಆಡಳಿತದಲ್ಲಿರುವ ಬರ್ಮಾಗಳ ನಡುವೆ ನೆಲೆಸಿರುವ ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ಪ್ರಜಾಪ್ರಭುತ್ವವಾದಿ ರಾಷ್ಟ್ರ.
೪. ಪ್ರತಿ ಚದರ ಕಿಲೋಮೀಟರಿಗೆ ೩೪೯ ಜನರು ವಾಸಿಸುತ್ತಾರೆ.
೫. ಭಾರತದ ಜನಸಂಖ್ಯೆಯ ೧೫% ರಷ್ಟು ಮುಸ್ಲಿಮರಿದ್ದಾರೆ.
೬. ಭಾರತದ ನಾಶಕ್ಕಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿವೆ. ಇನ್ನು ಚೀನಾ ಹಾಗೂ ನೇಪಾಳಗಳು ನಕ್ಸಲೀಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿವೆ.
೭. ಇದುವರೆಗೆ ಭಾರತ ಹಾಗು ಪಾಕಿಸ್ತಾನದ ನಡುವೆ ೪ ಯುದ್ಧಗಳಾಗಿದ್ದು ಭಾರತವು ಎಲ್ಲದರಲ್ಲೂ ಮೇಲುಗೈ ಸಾಧಿಸಿದೆ.
ಇನ್ನು ಇಸ್ರೇಲ್‌ದೇಶದ ಸ್ಥಾಪನೆ ಹಾಗೂ ಅದರ ಧೋರಣೆಗಳನ್ನು ಗಮನಿಸಿದರೆ ಅದು ಹೇಗೆ ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇನ್ನು ಅತ್ತ ಗಮನಹರಿಸೋಣ.
ಸ್ವಾತಂತ್ರ್ಯದವರೆಗಿನ ಇತಿಹಾಸ
ಅನೇಕ ಶತಮಾನಗಳ ಕಾಲ ದಾಳಿಕೋರರಿಂದ ಹೊರದೂಡಲ್ಪಟ್ಟು ಪ್ರಪಂಚದ ಮೂಲೆಮೂಲೆಗಳಲ್ಲಿ ಅಲೆದಾಡಿದ ಯಹೂದ್ಯರು ಕೊನೆಗೆ ತಮ್ಮ ಪೂರ್ವಜರ ನಾಡಿನಲ್ಲಿ ರಾಜ್ಯವೊಂದನ್ನು ಸ್ಥಾಪಿಸುವ ಸಲುವಾಗಿ "Zionist" ಚಳುವಳಿಯನ್ನು ಪ್ರಾರಂಭಿಸಿದರು. ಅದರ ಮೊದಲ ಅಧಿವೇಶನ ೧೮೯೬ರಲ್ಲಿ ನಡೆಯಿತು. ಮುಂದೆ ಮೊದಲನೆಯ ಜಾಗತಿಕಸಮರದಲ್ಲಿ ಬ್ರಿಟಿಷರಿಗೆ ಬೆಂಬಲ ನೀಡುವುದಕ್ಕೆ ಬದಲಾಗಿ ಯಹೂದ್ಯಜನರಿಗೆ ಪ್ಯಾಲೆಸ್ತೀನ್‌ನಲ್ಲಿ ಸ್ವತಂತ್ರರಾಜ್ಯವೊಂದನ್ನು ಸ್ಥಾಪಿಸಿಕೊಡುವುದಾಗಿ ಬ್ರಿಟಿಷರು ೧೯೧೭ರ ಬಾಲ್ಫೋರ್ ಘೋಷಣೆಯ ಮೂಲಕ ಒಪ್ಪಿಕೊಂಡರು. ಯುದ್ಧದ ಬಳಿಕ "League of Nation" ಅನುಮೋದಿಸಿ ಪ್ಯಾಲೆಸ್ಟೀನ್‌ಭೂಪ್ರದೇಶದಲ್ಲಿ ಯಹೂದ್ಯರಿಗೆ ದೇಶವೊಂದನ್ನು ಸ್ಥಾಪಿಸಲು ಕರೆಕೊಟ್ಟಿತು. ಆದರೆ ಅರಬ್ ರಾಷ್ಟ್ರಗಳ ಒತ್ತಾಯಕ್ಕೆ ಮಣಿದ ಬ್ರಿಟನ್ ಆ ಭೂಭಾಗದ ೭೭% ನಷ್ಟನ್ನು ’ಜೋರ್ಡಾನ್’ ಎಂಬ ಹೊಸದೇಶವನ್ನಾಗಿ ಮಾಡಿತು. ಇತ್ತ ಎರಡನೆಯ ಜಾಗತಿಕಸಮರವು ಪ್ರಾರಂಭವಾಗಿ ಯಹೂದ್ಯರು ಹಿಟ್ಲರನಿಂದ ಹಿಂಸೆಗೊಳಗಾಗಿ ತಮ್ಮ ತಮ್ಮ ದೇಶಗಳನ್ನು ತೊರೆದು ಪ್ಯಾಲಸ್ಟೀನ್ ಕಡೆಗೆ ವಲಸೆ ಹೋಗತೊಡಗಿದರು. ಆದರೆ ಅರಬರ ಒತ್ತಾಯದಿಂದಾಗಿ ಅನೇಕರನ್ನು ಬ್ರಿಟನ್ ಹಿಂದಕ್ಕಟ್ಟಬೇಕಾಯಿತು. ಯುದ್ಧ ಮುಗಿಯುವ ಹೊತ್ತಿಗೆ ಪರಿಸ್ಥಿತಿ ಬ್ರಿಟಿಷರ ಕೈಮೀರಿಹೋಗಿತ್ತು. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬ್ರಿಟಿಷರ ವಿರುದ್ಧ ಯಹೂದ್ಯರು ಉಗ್ರರೀತಿಯಲ್ಲಿ ಪ್ರತಿಭಟಿಸಲಾರಂಭಿಸಿದರು. ೧೯೪೭ರಲ್ಲಿ ಬ್ರಿಟಿಷರು ತಮ್ಮಿಂದ ಅರಬರಿಗೂ ಯಹೂದ್ಯರಿಗೂ ಒಪ್ಪಿಗೆಯಾಗುವಂತಹ ವಿಭಜನೆಯನ್ನು ಮಾಡಲು ವಿಫಲರಾಗಿರುವುದಾಗಿ ಕೈಚೆಲ್ಲಿದರು. ಆಗ ವಿಶ್ವಸಂಸ್ಥೆಯು ಜೋರ್ಡಾನ್ ಹುಟ್ಟಿದ ನಂತರ ಉಳಿದಿದ್ದ ಭೂಭಾಗದಲ್ಲಿ ಒಂದು ಅರಬ್ ಹಾಗೂ ಒಂದು ಯಹೂದ್ಯರಾಷ್ಟ್ರವನ್ನು ಸ್ಥಾಪಿಸಿ ’ಜೆರೂಸಲೆಂ’ ನಗರವನ್ನು ಯಾರೊಬ್ಬರಿಗೂ ಸೇರದ ಅಂತಾರಾಷ್ಟ್ರೀಯವಲಯವೆಂದು ಘೋಷಿಸಿತು. ಇದಕ್ಕೆ ಯಹೂದ್ಯಜನತೆ ಒಪ್ಪಿತಾದರೂ ಅರಬರು ಒಪ್ಪಲಿಲ್ಲ. ಆದರೂ ಮೇ ೧೪, ೧೯೪೮ರಂದು ’ಇಸ್ರೇಲ್’ ಎಂ ಯಹೂದ್ಯರಾಷ್ತ್ರವು ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಸ್ವಾತಂತ್ರ್ಯವನ್ನು ಘೋಷಿಸುತ್ತಾ ಇಸ್ರೇಲಿನ ಪ್ರಥಮಪ್ರಧಾನಿ ಡೇವಿಡ್ ಬೆನ್ ಗುರಿಯನ್ ಹೊಸರಾಜ್ಯದ ಬಗೆಗೆ ಹೀಗೆ ಹೇಳಿದರು: ಈ ರಾಜ್ಯವು ಇಸ್ರೇಲಿನ ಪ್ರವಾದಿಗಳು ಕಂಡ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿಯ ಬುನಾದಿಯ ಮೇಲೆ ನಿಲ್ಲಲಿದೆ. ಈ ದೇಶದ ಸಮಸ್ತವಾಸಿಗಳಿಗೂ ಜಾತಿ-ಜನಾಂಗ-ಲಿಂಗ ಮೊದಾಲಾದ ಭೇದಗಳಿಗೆ ಅತೀತವಾಗಿ ಎಲ್ಲರಿಗೂ ರಾಜಕೀಯ ಹಾಗೂ ಸಾಮಾಜಿಕ ಸಮಾನತೆಯನ್ನು ಕಲ್ಪಿಸುತ್ತದೆ. ಈ ರಾಜ್ಯವು ಮತ, ಅಂತಸ್ಸಾಕ್ಷಿ, ಭಾಷೆ, ಶಿಕ್ಷಣ ಹಾಗೂ ಸಂಸ್ಕೃತಿಗಳ ಸ್ವಾತಂತ್ರ್ಯಗಳನ್ನು ಕಾಪಾಡುತ್ತದೆ’ ಎಂದು. ೧೯೪೯ರಲ್ಲಿ ಇಸ್ರೇಲ್ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. ಆ
ಸಂದರ್ಭದಲ್ಲಿ ಭಾರತವು ಇಸ್ರೇಲಿನ ಸದಸ್ಯತ್ವಕ್ಕೆ ವಿರೋಧವಾಗಿ ಮತ ಚಲಾಯಿಸಿತು; ಮತ್ತೆ ಅದೇ ಮುಸ್ಲಿಮರ ಭಾವನೆಗಳನ್ನು ನೋವಾಗದಂತೆ ಕಾಪಾಡಿಕೊಳ್ಳಲು!
ಇನ್ನು ಭಾರತವೂ ಸಹ ಅನೇಕ ಶತಮಾನಗಳ ಮುಸ್ಲಿಂ ಹಾಗೂ ಬ್ರಿಟಿಷ್ ಆಡಳಿತದಿಂದ ಸೊರಗಿಹೋಗಿತ್ತು. ಭಾರತದ ಸ್ವಾತಂತ್ರ್ಯಸಂಗ್ರಾಮವನ್ನು ಮುನ್ನಡೆಸಿದ್ದು ೧೮೮೫ರಲ್ಲಿ ಪ್ರಾರಂಭವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಇದರ ನೆರಳಿನಲ್ಲಿ ಹಾಗೂ ಬಾಲಗಂಗಾಧರ ತಿಲಕ್, ಮಹಾತ್ಮಾ ಗಾಂಧಿ, ಸುಭಾಷ್‌ಚಂದ್ರ ಬೋಸ್ ಮೊದಲಾದವರ ಪ್ರಯತ್ನಗಳಿಂದ ಭಾರತವು ೧೫ನೇ ಆಗಸ್ಟ್, ೧೯೪೭ರಂದು ಸ್ವಾತಂತ್ರ್ಯ ಪಡೆಯಿತು. ಆಗಸ್ಟ್ ೧೪, ೧೯೪೭ರ ನಡುರಾತ್ರಿ ಸ್ವಾತಂತ್ರ್ಯವನ್ನು ಘೋಷಿಸುತ್ತಾ ಪ್ರಥಮಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೀಗೆ ನುಡಿದರು: ನಾವು ಯಾವುದೇ ಮತವನ್ನು ಪಾಲಿಸಿದರೂ ಸಮಾನವಾಗಿ ಭಾರತದ ಪ್ರಜೆಗಳು. ನಮಗೆ ಸಮಾನವಾದ ಹಕ್ಕುಗಳು, ಸವಲತ್ತುಗಳು ಹಾಗೂ ಬಾಧ್ಯತೆಗಳಿವೆ. ನಾವು ಕೋಮುವಾದವನ್ನಾಗಲಿ ಸಂಕುಚಿತಮನಸ್ಸನ್ನಾಗಲಿ ಪ್ರೋತ್ಸಾಹಿಸುವಂತಿಲ್ಲ. ಏಕೆಂದರೆ ಮಾತಿನಲ್ಲಾಗಲಿ ಕ್ರಿಯೆಯಲ್ಲಾಗಲಿ ಸಂಕುಚಿತವಾದ ಯಾವುದೇ ರಾಷ್ಟ್ರವೂ ಔನ್ನತ್ಯವನ್ನು ಸಾಧಿಸಲಾಗದು.’ ಎಂದು. ಉದಾರ’ವಾದರೂ ಈ ಘೋಷಣೆಯಲ್ಲೆಲ್ಲಿಯೂ ಭಾರತದ ಸಮೃದ್ಧವಾದ ಸಂಸ್ಕೃತಿಯನ್ನಾಗಲಿ ಅದನ್ನು ಬೆಳೆಸಿದ ಸನಾತನಧರ್ಮದ ಉಲ್ಲೇಖವಾಗಲಿ ಇಲ್ಲ. ಪ್ರಾಯಶಃ ಭವಿಷ್ಯದ ಸೂಚನೆಗಳು ಇಲ್ಲೇ ಇದ್ದುವೇನೋ! ಅದೇನೇ ಇರಲಿ, ನೆಹರು ಮಾತ್ರ ತಮ್ಮ ೧೭ ವರ್ಷಗಳ ಆಡಳಿತದ ಅವಧಿಯಲ್ಲಿ ಈ ಘೋಷಣೆಗೆ ತದ್ವಿರುದ್ಧವಾಗಿಯೇ ನಡೆದುಕೊಂಡರು.ಇಸ್ರೇಲ್ ಸ್ವಾತಂತ್ರ್ಯವನ್ನು ಘೋಷಿಸಿದ್ದೇ ತಡ, ಅರಬ್ ಸೇನೆಗಳೆಲ್ಲವೂ ಸೇರಿ ಅದರ ಮೇಲೆ ದಾಳಿಮಾಡಿದವು. ೧೯೪೭ರಲ್ಲಿ ವಿಶ್ವಸಂಸ್ಥೆಯು ವಿಭಜನೆಯ ಪ್ರಸ್ತಾವವನ್ನು ಮಂಡಿಸಿದಾಗಿನಿಂದಲೇ ಅರಬರಿಗೂ ಯಹೂದ್ಯರಿಗೂ ಸಂಘರ್ಷಗಳು ಶುರುವಾಗಿದ್ದವು. ಆ ಸಮಯದಲ್ಲಿ ಡೀವಿಡ್ ಬೆನ್ ಗುರಿಯನ್ ಎಲ್ಲ ಯಹೂದ್ಯರೂ ಕಡ್ಡಾಯವಾಗಿ ಯುದ್ಧತರಬೇತಿ ಪಡೆಯಬೇಕೆಂದು ಘೋಷಿಸಿದರು. ಆಗ ಗೋಲ್ಡಾ ಮೇರ್ ಅಮೆರಿಕದಲ್ಲಿ ಜಿಯೋನಿಸ್ಟ್ ಚಳುವಳಿಯ ಬೆಂಬಲಿಗರಿಂದ ಒಂದು
ತಿಂಗಳಿನಲ್ಲಿ ೫೦ ದಶಲಕ್ಷ ಡಾಲರ್‌ಗಳಷ್ಟು ಹಣವನ್ನು ಸಂಗ್ರಹಿಸಿದರು. ಅದರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅನುವಾಯಿತು. ಆ ಸಂದರ್ಭದಲ್ಲಿ ಡೇವಿಡ್ ಬೆನ್ ಗುರಿಯನ್ ಆಕೆಗೆ ಹೇಳಿದ ಮಾತು ಉಲ್ಲೇಖನೀಯ: ’ನಮ್ಮ ಈ ಇತಿಹಾಸವನ್ನು ಬರೆದಾಗ ಒಬ್ಬ ಯಹೂದ್ಯಮಹಿಳೆಯ ಕಾರಣ ಯಹೂದ್ಯರಾಷ್ಟ್ರ ಸ್ಥಾಪನೆಯಾಯಿತು ಎಂದು ನಮೂದಿಸುತ್ತಾರೆ’ ಎಂದು. (Dominique Lapierre and Larry Collins, O Jerusalem!) . ಒಟ್ಟಿನಲ್ಲಿ ಮೇ ೧೪, ೧೯೪೮ರ್ ವೇಳೆಗೆ ಇಸ್ರೇಲ್ ಯುದ್ಧಕ್ಕೆ ಸಜ್ಜಾಗಿತ್ತು. ಮೇ ೧೪ರ ನಡುರಾತ್ರಿ ಜೋರ್ಡಾನ್, ಸಿರಿಯಾ, ಲೆಬನಾನ್, ಈಜಿಪ್ಟ್, ಹಾಗೂ ಇರಾಕ್ ರಾಷ್ಟ್ರಗಳ ಸೇನೆಗಳು ಜೆರೂಸಲೆಂನ ಸುತ್ತಮುತ್ತಲಿನ ಭಾಗಗಳು ಸೇರಿದಂತೆ ಹೊಸ ಅರಬ್ ರಾಷ್ಟ್ರವಾದ ಪ್ಯಾಲಸ್ಟೀನನ್ನು ಆಕ್ರಮಿಸಿದುವು. ಒಂದು ಯಹೂದ್ಯ ಹಾಗೂ ಒಂದು ಅರಬ್ ರಾಷ್ಟ್ರದ ಬದಲಿಗೆ ಒಂದೇ ಪ್ಯಾಲಸ್ಟೀನ್ ರಾಷ್ಟ್ರವು ಇರಬೇಕೆಂಬುದು ತಮ್ಮ ಗುರಿಯೆಂದು ಸಾರಿದವು. ಅರಬ್ ಲೀಗಿನ ಸೆಕ್ರೆಟರಿ-ಜನರಲ್ ಅಜಾಮ್ ಪಾಶಾ ೧೫ ಮೇ, ೧೯೪೮ ರಂದು ಬಿ.ಬಿ.ಸಿ.ಗೆ ನೀಡಿದ ಸಂದರ್ಶನದಲ್ಲಿ
’The Arabs intend to conduct a war of extermination and momentous massacre which will be spoken of like the Mongolian massacres and the Crusades.’

ಎಂದು ಘೋಷಿಸಿದರು. ಇಸ್ರೇಲ್, ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳು ಅರಬರ ಆಕ್ರಮಣವನ್ನು ಖಂಡಿಸಿದವು. ಮೇ ೨೬, ೧೯೪೮ರಂದು ಪ್ರತ್ಯೇಕವಾಗಿದ್ದ ಯುದ್ಧಬಣಗಳಾದ ’ಹಗಾನಾಹ್’, ’ಇರ್ಗುನ್’ ಮುಂತಾದವುಗಳೆಲ್ಲಾ ಸೇರಿ ’ಇಸ್ರೇಲಿ ರಕ್ಷಣಾ ಪಡೆ’ಸ್ಥಾಪನೆಗೊಂಡಿತು. ವಲಸೆಬರುತ್ತಿದ್ದ ಜನಗಳ ಕಾರಣ ಇಸ್ರೇಲಿನ ಸೇನಾಬಲ ದಿನೇದಿನೇ ಹೆಚ್ಚತೊಡಗಿತು. ಹಂತಹಂತವಾಗಿ ಇಸ್ರೇಲ್ ಕೈಮೇಲಾಗಿ ಕೊನೆಗೆ ಜುಲೈ, ೧೯೪೯ರ ವೇಳೆಗೆ ನಿಚ್ಚಳ ಗೆಲವು ಸಂಪಾದಿಸಿತು. ಜೋರ್ಡಾನ್, ಸಿರಿಯಾ, ಈಜಿಪ್ಟ್ ಹಾಗೂ ಲೆಬನಾನ್ ಇಸ್ರೇಲಿನೊಡನೆ ಯುದ್ಧನಿಲುಗಡೆಯ ಒಪ್ಪಂದವನ್ನು ಮಾಡಿಕೊಂಡವು. ಇರಾಕ್ ತನ್ನ ಸೇನೆಯನ್ನು ಹಿಂತೆಗೆದುಕೊಂಡಿತು. ಆದರೆ ಯಾವ ಅರಬ್ ರಾಷ್ಟ್ರವೂ ಇಸ್ರೇಲಿನೊಡನೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲಿಲ್ಲ. ಇಸ್ರೇಲನ್ನು ನಾಶಮಾಡಹೊರಟ ಅರಬರಿಗೆ ವಿಶ್ವಸಂಸ್ಥೆಯ ನಿರ್ಣಯದ ಮೂಲಕ ಸಿಗುತ್ತಿದ್ದುದಕ್ಕಿಂತ ಕಡಿಮೆ ಭೂಮಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇಸ್ರೇಲಿಗಾದರೋ ವಿಜಯದ ಬೆಲೆ ಬಹಳವಾಗಿತ್ತು. ೬೩೭೩ ಜನರು ಪ್ರಾಣ ಕಳೆದುಕೊಂಡಿದ್ದರು. ಅದು ಇಸ್ರೇಲಿಗಳ ಅಂದಿನ ಜನಸಂಖ್ಯೆಯ ೧% ರಷ್ಟು. ಅದಲ್ಲದೆ ಫಲವತ್ತಾದ ಭೂಮಿಗಳು ಸುಟ್ಟು ತೋಟಗಳೆಲ್ಲ ನಾಶವಾಗಿ ಹೋದವು. ಈ ಯುದ್ಧದಲ್ಲಿ ಇಸ್ರೇಲಿಗೆ ವ್ಯಾಪಕವಾದ ಅಮೆರಿಕನ್ ನೆರವು ದೊರೆಯಿತೆಂದು ಹಲವರ ಅಭಿಪ್ರಾಯ. ವಿಶ್ವಸಂಸ್ಥೆಯ ವಿಭಜನೆಯ ಪ್ರಸ್ತಾವಕ್ಕೆ ಅಮೆರಿಕದ ಒಪ್ಪಿಗೆಯಿದ್ದರೂ ಅದು ಡಿಸೆಂಬರ್ ೫, ೧೯೪೭ ರಂದು ಇಡಿಯ ಮಧ್ಯ ಏಷಿಯಾ ಪ್ರಾಂತ್ಯದ ಮೇಲೆ ಶಸ್ತ್ರಾಸ್ತ್ರಮಾರಾಟನಿಷೇಧವನ್ನು ಹೇರಿತು. ಇಸ್ರೇಲಿಗಳು ತಮಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಜಕೊಸ್ಲೊವಾಕಿಯಾದಿಂದ ಗುಪ್ತರೀತಿಯಲ್ಲಿ ಪಡೆದುಕೊಳ್ಳಬೇಕಾಯಿತು. ಅರಬರಿಗಾದರೋ ಬ್ರಿಟಿಷರಿಂದಲೇ ದೊರೆತಿತ್ತು (Larry Collins and Dominique Lapierre, O Jerusalem!, Simon and Schuster, 1972, p. 352).

ಯುದ್ಧ ಮುಗಿದ ಮೇಲೆ ಅರಬ್ ದೇಶಗಳಿಂದ ಯಹೂದ್ಯರ ವಲಸೆ ಪ್ರಾರಂಭವಾಯಿತು. ಯುದ್ಧಕ್ಕೆ ಮುಂಚೆಯೇ ವಿಶ್ವಸಂಸ್ಥೆಯಲ್ಲಿ ಈಜಿಪ್ಟಿನ ಪ್ರತಿನಿಧಿ ’The lives of one million Jews in Muslim countries would be jeopardized by partition.’ ಎಂದು ಹೇಳಿದ್ದರು. ಅದರಂತೆ ಸುಮಾರು ೮೨೦,೦೦೦ ಯಹೂದ್ಯರು ೧೯೪೮ರ ಬಳಿಕ ಅರಬ್‌ರಾಷ್ಟ್ರಗಳನ್ನು ಬಿಟ್ಟು ವಲಸೆ ಬಂದರು. ಅವರಲ್ಲಿ ಸುಮಾರು ೫೮೬,೦೦೦ ಜನರಿಗೆ ಇಸ್ರೇಲ್ ಆಶ್ರಯ ನೀಡಿತು. ಹೀಗಾಗಿಯೇ ಅವರು ನಿರಾಶ್ರಿತರಾಗಿದ್ದರೆಂಬುದನ್ನು ಜಗತ್ತು ಬಹುಬೇಗ ಮರೆತುಬಿಟ್ಟಿತು. ಇವರೇ ಅಲ್ಲದೆ ಯುದ್ಧದ ಸಮಯದಲ್ಲಿ ಇಸ್ರೇಲಿಗೇ ಅಂಟಿಕೊಂಡ ೧೬೦,೦೦೦ ಅರಬರನ್ನು ಇಸ್ರೇಲ್ ತನ್ನ ಪ್ರಜೆಗಳನ್ನಾಗಿ ಸ್ವೀಕರಿಸಿತು. ಯುದ್ಧದ ಸಮಯದಲ್ಲಿಯೇ ಅನೇಕ ಅರಬರು ಇಸ್ರೇಲನ್ನು ಬಿಟ್ಟು ವಲಸೆ ಹೋಗಿಯಾಗಿತ್ತು. ಯುದ್ಧದಲ್ಲಿ ಸೋಲುಂಡ ಅರಬ್ ದೇಶಗಳು ಈ ಅರಬ್ ನಿರಾಶ್ರಿತರನ್ನು ನಡುನೀರಿನಲ್ಲಿ ಬಿಟ್ಟರು. ಕೆಲವರನ್ನು ಜೋರ್ಡಾನ್ ತನ್ನ ದೇಶಕ್ಕೆ ಸೇರಿಸಿಕೊಂಡಿತು. ಇನ್ನುಳಿದವರನ್ನು ಮತ್ತಾವ ಅರಬ್ ದೇಶವೂ ಸೇರಿಸಿಕೊಳ್ಳಲಿಲ್ಲ. ಅರಬ್ ರಾಷ್ಟ್ರಗಳು ಇಸ್ರೇಲಿನ ಅರಬರು ಮತ್ತೆ ಇಸ್ರೇಲಿಗೇ ವಾಪಸಾದರೆ ಆಂತರಿಕವಾಗಿ ಆ ದೇಶವನ್ನು ಶಿಥಿಲಗೊಳಿಸಬಹುದು ಎಂದು ನಂಬಿದ್ದವು. ಲೆಬನಾನಿನ ಅಲ್-ಸೇದ್ ದಿನಪತ್ರಿಕೆಯು ಏಪ್ರಿಲ್ ೬, ೧೯೫೦ರ ಸಂಚಿಕೆಯಲ್ಲಿ ’ವಾಪಸಾಗುವ ಅರಬರು ಅಲ್ಲಿ ಬಹುಸಂಖ್ಯಾತ ಅರಬ್ ಸಮುದಾಯವನ್ನು ಸ್ಥಾಪಿಸಬೇಕು. ಇದು ಪ್ಯಾಲಸ್ಟೀನಿನ ಅರಬ್ ಪ್ರಕೃತಿಯನ್ನು ಮರುಕಳಿಸಲು ಅತ್ಯಂತ ಸರಿಯಾದ ದಾರಿಯಷ್ಟೇ ಅಲ್ಲದೆ ಮುಂದೆ ಸೇಡು ತೀರಿಸಿಕೊಳ್ಳುವ ಕಾಲದಲ್ಲೂ ತುಂಬಾ ಸಹಕಾರಿ’ ಎಂದು ಸಾರಿತು. ಇದಷ್ಟೇ ಅಲ್ಲದೆ ಅಲ್-ಮಿಸ್ರಿ ಪತಿಕೆಯಲ್ಲಿ ಅಕ್ಟೋಬರ್ ೧೧, ೧೯೪೯ ರಂದು ಈಜಿಪ್ಟಿನ ವಿದೇಶಾಂಗ ಸಚಿವರು ಹೀಗೆ ಹೇಳಿದರು: ಅರಬರು ಇಸ್ರೇಲಿಗೆ ವಾಪಸಾಗಲಿ ಎಂದು ಕೇಳುವಾಗಲೇ ಅವರು ಆ ನಾಡಿನ ಒಡೆಯರಾಗಿ ವಾಪಸಾಗಲಿ ಎಂದರ್ಥ; ಗುಲಾಮರಾಗಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅವರು ಇಸ್ರೇಲನ್ನು ನಾಶಮಾಡಲು ಹೋಗುವುದು ಎಂದು. ಈ ಧೂರ್ತತೆಯನ್ನು ಗ್ರಹಿಸಿದ್ದ ಇಸ್ರೇಲ್ ಅದಕ್ಕೆ ಆಸ್ಪದ ಕೊಡಲಿಲ್ಲ. ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುತ್ತಾರೆಯೇ? (ನಮ್ಮ ಭಾರತವಾದರೋ ಭಯ್ಫೋತ್ಪಾದಕ ಗುಂಪುಗಳಿಗೆ ಆಶ್ರಯವಾಗಿರುವ ಬಾಂಗ್ಲಾದೇಶದ ಶನಿಸಂತಾನವನ್ನು ಎಗ್ಗಿಲ್ಲದೆ ನಮ್ಮ ದೇಶದೊಳಕ್ಕೆ ಸೇರಿಸಿಕೊಳ್ಳುತ್ತಿದೆ. ಇಲ್ಲಿಯೇ ತಿಳಿಯುತ್ತದೆ ಭಾರತಕ್ಕೂ ಇಸ್ರೇಲಿಗೂ ವ್ಯತ್ಯಾಸ ಹೇಗಿದೆ ಎಂದು). ವಿಶ್ವಸಂಸ್ಥೆಯ ಮುಂದಾಳತ್ವದಲ್ಲಿ ನಿರಾಶ್ರಿತರಾದ ಈ ಪ್ಯಾಲಸ್ಟೀನ್ ಜನರಿಗೆ ಶಿಬಿರಗಳನ್ನು ಕಲ್ಪಿಸಲಾಯಿತು. ಈ ಜನರು ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಹೊರಾಡಲು ಒಂದು ನಿಮಿತ್ತ ಮಾತ್ರ. ಇಲ್ಲದಿದ್ದಲ್ಲಿ ಈ ಜನರನ್ನು ಶಿಬಿರಗಳಲ್ಲಿ ಕೊಳೆಯಲು ಬಿಡುತ್ತಿದ್ದರೇ? ಆಗಿನಿಂದ ಈ ದಿನದವರೆಗೂ ಅಂತಾರಾಷ್ಟ್ರೀಯ ನೆರವಿನಿಂದಲೇ ಪ್ಯಾಲಸ್ಟೀನ್ ಸಾಗುತ್ತಿರುವುದು. ಆ ನೆರವಿನ ಬಹುಭಾಗ ಕೂಡ ಬರುವುದು ಯುರೋಪ್ ಹಾಗೂ ಅಮೇರಿಕದಿಂದ. ಅರಬ್ ರಾಷ್ಟ್ರಗಳಿಂದೇನೂ ಅಲ್ಲ. ಆ ನೆರವಿನ ಹಣವನ್ನು ಕೂಡ ಯಾಸರ್ ಅರಾಫತ್‌ರಂತಹ ನಾಯಕರು ನುಂಗುವುದೇ ಆಗಿದೆ. ೨೦೦೩ ರಲ್ಲಿ ಫೋರ್ಬ್ಸ್ ಪ್ರಕಟಿಸಿದ ರಾಜಮನೆತನದವರ ಹಾಗೂ ಸರ್ವಾಧಿಕಾರಿಗಳ ಸಂಪತ್ತಿನ ಅಂದಾಜಿನಲ್ಲಿ ಅರಾಫತ್ ಪ್ರಪಂಚದಲ್ಲಿ ೬ನೇ ಸ್ಥಾನದಲ್ಲಿದ್ದರು. ಇವರನ್ನು ಭಾರತವು ಹೊಗಳಿದ್ದೂ ಹೊಗಳಿದ್ದೇ. ಇರಲಿ, ಒಟ್ಟಿನಲ್ಲಿ ’ಪ್ಯಾಲಸ್ಟೀನಿಯನ್ ಅಥಾರಿಟಿ’ ಎಂಬುದು ಅಂತಾರಾಷ್ಟ್ರೀಯ ನೆರವನ್ನು ನುಂಗುವುದಷ್ಟನ್ನೇ ಮಾಡುತ್ತಿರುವುದು.

ಇನ್ನು ಭಾರತವನ್ನು ಗಮನಿಸಿದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದಕೂಡಲೇ ದೇಶವಿಭಜನೆಯು ನಡೆದು ಭಾರತ-ಪಾಕಿಸ್ತಾನಗಳ ನಡುವೆ ಮಾನವಪ್ರವಾಹವೇ ಹರಿಯಿತು. ಬೇಗ ಕೈತೊಳೆದುಕೊಂಡು ಹೊರಡುವ ಆತುರದಲ್ಲಿದ್ದ ಬ್ರಿಟಿಷರ ಬೇಜವಾಬ್ದಾರಿತನದ ಕಾರಣ ಹಾಗೂ ಮುಸ್ಲಿಂ ಲೀಗಿನ ಮೇಲಿನ ಅತಿವಿಶ್ವಾಸದ ಕಾರಣ ಅದರಿಂದೊದಗಬಹುದಾದ ಅನಾಹುತಗಳ ಬಗೆಗೆ ನಮ್ಮ ನಾಯಕರು ಚಿಂತಿಸಲೇ ಇಲ್ಲ.(ಬ್ರಿಟಿಷರು ಎಲ್ಲೆಡೆ ಮಾಡಿದ್ದು ಇದನ್ನೇ. ತಾವು ಬಿಟ್ಟುಹೋಗುವ ವಸಾಹತುಗಳಲ್ಲಿ ದಶಕಗಳ ಕಾಲ ಉರಿಯುವಂತಹ ದ್ವೇಷದ ಬೆಂಕಿಯನ್ನು ಹಚ್ಚಿಯೇ ಹೋಗಿದ್ದಾರೆ. ಪ್ಯಾಲಸ್ಟೀನ್‌ನಲ್ಲಿ ಮಾಡಿದ್ದೂ ಇದನ್ನೇ ತಾನೆ?). ಪರಿಣಾಮವಾಗಿ ಪಾಕಿಸ್ತಾನದ ಭಾಗದಲ್ಲಿದ್ದ ಪಂಜಾಬಿನಲ್ಲಿ ಹಿಂದುಗಳ ಹಾಗೂ ಸಿಖ್ಖರ ಮಾರಣಹೋಮ ನಡೆಯಿತು. ಪ್ರತಿಕ್ರಿಯೆಯಾಗಿ ಭಾರತದ ಭಾಗದ ಪಂಜಾಬಿನಲ್ಲಿದ್ದ ಮುಸ್ಲಿಮರು ಹಿಂದುಗಳ ದಾಳಿಗೆ ಸಿಲುಕತೊಡಗಿದರು. ಮಹಾತ್ಮಾ ಗಾಂಧಿ ಹಾಗೂ ಸರ್ದಾರ್ ಪಟೇಲರು ಮತ್ತೆ ಮತ್ತೆ ಮನವಿ ಮಾಡಿದ್ದುದರಿಂದ ಭಾರತದ ಕಡೆಯಿಂದ ಪಾಕಿಸ್ತಾನದ ಕಡೆಗೆ ಹೋಗುತ್ತಿದ್ದ ಮುಸ್ಲಿಮರಿಗೆ ಸ್ವಲ್ಪ ರಕ್ಷಣೆ ದೊರೆಯಿತು. ಆದರೆ ಪಾಕಿಸ್ತಾನದಿಂದ ಭಾರತದೆಡೆಗೆ ಬರುತ್ತಿದ್ದವರಿಗೆ ಆಪತ್ತು ತಪ್ಪಲಿಲ್ಲ. ಆ ಸಂದರ್ಭದಲ್ಲಿ ನಿರ್ಗತಿಕರಾದವರಿಗೆ ಲೆಕ್ಕವೇ ಇಲ್ಲ. ಭಾರತದ ನಾಯಕರು ’ಡೈರೆಕ್ಟ್ ಆಕ್ಷನ್ ಡೇ’ ಕಲಿಸಿದ ಪಾಠವನ್ನು ಮರೆತಿದ್ದರು.(ಆಗ ೨೪ ಗಂಟೆಗಳ ಕಾಲದಲ್ಲಿ ಕಲ್ಕತ್ತಾದಲ್ಲಿ ಸುಮಾರು ೬,೦೦೦ ಹಿಂದುಗಳ ಮಾರಣಹೋಮ ನಡೆದಿತು). ಬಿ.ಬಿ.ಸಿ ಅಂದಾಜುಗಳ ಪ್ರಕಾರ ದೇಶವಿಭಜನೆಯ ಕಾಲದಲ್ಲಿ ಸುಮಾರು ೫ ಲಕ್ಷ ಜನರು ಪ್ರಾಣ ಕಳೆದುಕೊಂಡರು. ಆ ಸಂದರ್ಭದಲ್ಲಿ ದೆಹಲಿಯಲ್ಲಿ ಅನೇಕ ನಿರ್ಗತಿಕರು ಬಂದು ಸೇರಿದ್ದರು. ನಮ್ಮ ಈ ಕಾಲದ ’ಸೆಕ್ಯುಲರಿಸ್ಟ್‌ಗಳ ಜಾಡಿನ ಪ್ರವರ್ತಕರಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಆ ಸಮಯದಲ್ಲಿ ಮುಸ್ಲಿಮರ ಸುರಕ್ಷತೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿ ದೆಹಲಿಯ ಪೋಲೀಸ್ ಕಮೀಷನರ್‌ರನ್ನು ವಜಾಮಾಡಲು ಒತ್ತಾಯಿಸಿದರು. ಕಮೀಷನರ್‌ರ ಬಗೆಗೆ ಗೊತ್ತಿದ್ದ ಪಟೇಲರು ಇದಕ್ಕೊಪ್ಪಲಿಲ್ಲ. ಮತ್ತೆ ಮೌಲಾನಾ ಆಜಾದ್ ಮತ್ತು ನೆಹರು ಭಾರತದ ಮುಸ್ಲಿಮರು ಬಿಟ್ಟುಹೋಗಿರುವ ಆಸ್ತಿಪಾಸ್ತಿಗಳನ್ನು ಭಾರತದಲ್ಲಿಯೇ ಉಳಿಯಲು ನಿರ್ಧರಿಸಿರುವ ಮುಸ್ಲಿಮರಿಗೇ ಮೀಸಲಿಡಬೇಕೆಂದು ಮನವಿ ಮಾಡಿಕೊಂಡರು. ಒಂದು ಜಾತ್ಯತೀತರಾಷ್ಟ್ರದಲ್ಲಿ ಹಾಗೆ ಮಾಡಲಾಗುವುದಿಲ್ಲವೆಂದು ಪಟೇಲರು ಹೇಳಬೇಕಾಯಿತು. (Gandhi, Rajmohan. Patel: A Life. pp. 432-33 ). ಹೀಗೆ ಮುಸ್ಲಿಮರನ್ನು ಓಲೈಸುವ ಪದ್ಧತಿ ದೇಶವಿಭಜನೆಯಂತಹ ಸಮಯದಲ್ಲೂ ಇದ್ದಿತು ಎಂದರೆ ನೆಹರು ತಮ್ಮ ಸ್ವಾತಂತ್ರ್ಯಘೋಷಣೆಯನ್ನು ಎಷ್ಟು ಬೇಗ ಮರೆತಿದ್ದರು ಎಂಬುದು ತಿಳಿಯುತ್ತದೆ. ಇದಲ್ಲದೆ ದೇಶದ ನಾನಾ ಪ್ರಾಂತ್ಯಗಳನ್ನು ಒಗ್ಗೂಡಿಸುವ ಮಹಾಕಾಯಕ ಎದುರಾಯಿತು. ಒಂದು ರಾಜ್ಯವನ್ನು ಬಿಟ್ಟು ಮಿಕ್ಕೆಲ್ಲವನ್ನೂ ಸರ್ದಾರ್ ಪಟೇಲ್ ಅನನ್ಯದಕ್ಷತೆಯಿಂದ ಮಾಡಿ ಮುಗಿಸಿದರು. ಆ ಒಂದು ರಾಜ್ಯ ಕಾಶ್ಮೀರ. ಅದನ್ನು ಸಾಧಿಸುವೆನೆಂದು ಹೋದವರು ನೆಹರು. ಕಾಶ್ಮೀರದ ಮಹಾರಾಜ ಹರಿಸಿಂಗ್ ತಾನು ಯಾವ ಕಡೆಗೂ ಸೇರಲು ಬಯಸುವುದಿಲ್ಲವೆಂದು ಹಠಹಿಡಿದಿದ್ದರು. ಆದರೆ ಅಷ್ಟರಲ್ಲಿ ಪಾಕಿಸ್ತಾನವು ಪಾಶ್ತುನ್ ಬುಡಕಟ್ಟುಜನಗಳ ಜೊತೆ ತನ್ನ ಸೇನೆಯ ಜನರನ್ನೇ ಕಳಿಸಿ ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. ಪರಿಸ್ಥಿತಿ ಕೈಮೀರಿಹೋಗುತ್ತಿರುವುದನ್ನು ಗಮನಿಸಿ ಹರಿಸಿಂಗ್ ಭಾರತದೊಡನೆ ಒಂದಾಗುತ್ತೇನೆಂದು ಒಪ್ಪಿ ರುಜುಮಾಡಿದರು. ಆಗ ಕಾಶ್ಮೀರವನ್ನು ಕಾಪಾಡಲು ಭಾರತದ ಸೇನೆಯನ್ನು ಕಾಶ್ಮೀರಕ್ಕೆ ಕಳಿಸಲಾಯಿತು. ಅದೇ ಭಾರತ-ಪಾಕಿಸ್ತಾನಗಳ ನಡುವೆ ನಡೆದ ಮೊದಲ ಯುದ್ಧ. ಭಾರತದ ಪಡೆಗಳ ಕೈಮೇಲಾಗುತ್ತಿರುವಾಗಲೇ ನೆಹರು ಇನ್ನೂ ಆಕ್ರಮಿಸಿಕೊಂಡಿರುವ ಭಾಗಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಮೊದಲೇ ಬ್ರಿಟಿಷರ ಮಾತನ್ನು ಕೇಳಿ(ಸರ್ದಾರ್ ಪಟೇಲರ ವಿರೋಧದ ಹೊರತಾಗಿಯೂ) ವಿಶ್ವಸಂಸ್ಥೆಯ ಮೊರೆಹೊಕ್ಕರು. ವಿಶ್ವಸಂಸ್ಥೆಯು ಯುದ್ಧನಿಲುಗಡೆಯನ್ನು ಸೂಚಿಸಿ ಆ ಹೊತ್ತಿನಲ್ಲಿ ಯಾರು ಯಾವ ಭಾಗಗಳನ್ನು ಹೊಂದಿದ್ದರೋ ಅದನ್ನು ಹಾಗೆಯೇ ಉಳಿಸಿಕೊಳ್ಳುವುದೆಂದು ಘೋಷಿಸಿತು. ಮತ್ತು ಭಾರತವು ಕಾಶ್ಮೀರದಲ್ಲಿ ಶಾಂತಿಸ್ಥಾಪನೆಯಾದ ಬಳಿಕ ಜನತೆಯ ಇಚ್ಛೆಯಂತೆ ಭಾರತಕ್ಕೋ ಪಾಕಿಸ್ತಾನಕ್ಕೊ ಸೇರಲು ಅನುವು ಮಾಡಬೇಕಾಗಿ ತೀರ್ಪಿತ್ತಿತು. ಅದರಂತೆ ಕಾಶ್ಮೀರದ ೪೦% ರಷ್ಟು ಭಾಗ ಪಾಕಿಸ್ತಾನಕ್ಕೇ ಉಳಿಯಿತು. ಈ ಒಂದು ತಪ್ಪು ನಿರ್ಧಾರದಿಂದ ಭಾರತಕ್ಕೊಂದು ಶಾಪವೇ ತಟ್ಟಿದಂತಾಯಿತು. ಕಾಶ್ಮೀರವನ್ನು ಭಾರತದೊಡನೆ ಇಟ್ಟುಕೊಳ್ಳಲು ಇಲ್ಲದ ಸವಲತ್ತುಗಳನ್ನು ಕೊಡಬೇಕಾಯಿತು. ಈ ಕಾಶ್ಮೀರವೇ ಮುಂದೆ ಭಾರತದ ಹಣಕಾಸಿನಿಂದ ಕೊಬ್ಬಿ ಭಾರತವಿರೋಧಿ ಚಟುವಟಿಕೆಗಳಿಗೆ ಹೇಗೆ ಕುಮ್ಮಕ್ಕು ನೀಡಿತು ಎಂಬುದೀಗ ಇತಿಹಾಸ. ಇಸ್ರೇಲ್ ಅದೆಷ್ಟು ದಕ್ಷತೆಯಿಂದ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಂಡಿತೋ ಅಷ್ಟೇ ದಡ್ಡತನದಿಂದ ಭಾರತ ನಡೆದುಕೊಂಡಿತು. ಇಸ್ರೇಲ್ ಕಥೆ ಇನ್ನೂ ಮುಂದುವರಿಯುತ್ತದೆ ಜೈ ಮಹಾಕಾಲ್... ಆಧಾರ ವಾಸುಕಿ ಹೆಚ್.

Source: Internet
https://www.facebook.com/photo.php?fbid=474193616009586&set=a.196532057109078.41785.100002568554371&type=1&ref=nf